ನಾವೇನು ನಟಿಯನ್ನು ಮದುವೆಯಾಗಿ ನಂತರ ಕೈಬಿಟ್ಟಿಲ್ಲ: ಎಚ್ಡಿಕೆಗೆ ಮುಲಾಲಿ ತಿರುಗೇಟು | Janata news
ಬಾಗಲಕೋಟೆ : ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಕೇರಳದ ವೈನಾಡಿಗೆ ಪದೇ ಪದೇ ಹೋಗ್ತಾರೆ ಎಂಬ ನನ್ನ ಹೇಳಿಕೆಗೆ ಎಚ್.ಡಿ. ಕುಮಾರಸ್ವಾಮಿ ಅವರೊಬ್ಬರೇ ಏಕೆ ಪ್ರತಿಕ್ರಿಯಿಸಿದರು ಎಂದು ಸಾಮಾಜಿಕ ಕಾರ್ಯಕರ್ತ ಬಳ್ಳಾರಿಯ ರಾಜಶೇಖರ ಮುಲಾಲಿ ಪ್ರಶ್ನಿಸಿದರು.
ರಾಜ್ಯದಲ್ಲಿ ಏಳು ಮಂದಿ ಮಾಜಿ ಮುಖ್ಯಮಂತ್ರಿಗಳು ಬದುಕಿದ್ದಾರೆ. ಅವರ್ಯಾರೂ ಪ್ರತಿಕ್ರಿಯೆ ನೀಡಿಲ್ಲ. ಇವರಿಗ್ಯಾಕೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕು ಏಕೆ ಎಂದರು.
ಕುಮಾರಸ್ವಾಮಿ ಮಾತಾಡುವಾಗ ತಾವೊಬ್ಬ ಮಾಜಿ ಸಿಎಂ ಎಂಬುದನ್ನು ಅರಿತು ಗೌರವದಿಂದ ಮಾತಾಡಬೇಕು. ಒದ್ದು ಒಳಗೆ ಹಾಕಿ, ಏರೋಪ್ಲೇನ್ ಏರಿಸಿ ಅಂದರೆ ಏನರ್ಥ? ಹೋರಾಟಗಾರರ ಬಗ್ಗೆ ಮಾತನಾಡೋವಾಗ ಸ್ವಲ್ಪ ಬಾಯಿ ಬಿಗಿ ಹಿಡಿದು ಮಾತಾಡಬೇಕು. ಇದು ಅವರ ಸಂಸ್ಕಾರ ತೋರಿಸುತ್ತೆ. ನಾವೇನು ಯಾವುದೋ ಚಿತ್ರನಟಿಯನ್ನು ಮದುವೆಯಾಗಿ ನಂತರ ಕೈಬಿಟ್ಟಿಲ್ಲ. ಇನ್ನೊಂದು ಮದುವೆ ಆಗೋದು.. ಅಂತಹವೇನು ಮಾಡಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಅಂದರೆ, ತಿಳಿದುಕೊಂಡು ಮಾತನಾಡಬೇಕು ಎಂದ ಅವರು, ಎಚ್ಡಿ ಕುಮಾರಸ್ವಾಮಿ ಅವರ ಸಿಡಿ ಇದೆಯಾ ಎಂಬ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದು ರಾಜಶೇಖರ್ ಮುಲಾಲಿ ಹೇಳಿದರು.
ನಾಳೆ ಇನ್ನೊಂದು ಕಡೆ ರಾಜಕಾರಣಿಗಳಿಗೆ ಮತ್ತೊಂದು ವಿಷಯ ಬಹಿರಂಗಪಡಿಸುತ್ತೇನೆ ಎಂದು ರಾಜಶೇಖರ್ ಮುಲಾಲಿ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.